Thursday, February 28, 2008

ಮತ್ತೆ ಸುತ್ತುತ್ತಾ

ಭರವಸೆಗಳಿಗೆ ರಜಾ ಕೊಟ್ಟುಬಿಡಬೇಕು
ಕನಸುಗಳನ್ನ ಗುಡಿಸಿ ಬಿಸಾಕಿಬಿಡಬೇಕು
ತಣ್ಣಗಿದ್ದುಬಿಡಬೇಕು
ಬೇಕು ಬೇಕು ಬೇಕು ಬೇಕು
ಫೀನಿಕ್ಸುಗಳು ಮತ್ತೆ ಎದ್ದು ಕೂತವು
ಭಸ್ಮಾಸುರನ ಬೂದಿಯಿಂದೆದ್ದ ಮೋಹಿನಿಯರು
ಕಣ್ಣಲ್ಲಿ ನಾಕು
ಕನಸಲ್ಲಿ ಎಂಟು
ಒಂದು ಬೂದಿಗೆ ಎರಡು ಹಕ್ಕಿ ಫ್ರೀ -
ಕನಸೀಗ ರಕ್ತಬೀಜಾಸುರ.
ಯಾರಪ್ಪನ ಮನೇ ಗಂಟು,
ಕನಸಿಗೇನು ಕಾಸೇ?!
ಮತ್ತೆ ಸುತ್ತುತ್ತಾ
ಸರಿ, ಬನ್ನಿ, ಕುಕ್ಕಿ ಎಂದೆ
ಮತ್ತೆ ಸುಡುತ್ತಾ

Wednesday, February 20, 2008

ದೇಶಕಾಲದ ನಂಟು

ಕೆಲಸಕ್ಕೆ ಸೇರಿದ್ ಹೊಸದರಲ್ಲಿ ಊರಿಗೆಲ್ಲ ಒಬ್ಬಳೇ ಪದ್ಮಾವತಿಯಂತೆ ಅಲ್ಲಿದ್ದ ಆಲ್‍ಮೋಸ್ಟ್ ಏಕೈಕ(ಆಗ) ಕನ್ನಡ ಓದುಗಳಾಗಿ ಮೆರೀತಿದ್ದಾಗ, ಕನ್ನಡದ little magazineಗಳ ಬಗ್ಗೆ ಮಾಹಿತಿ ಹುಡುಕ್ತಿದ್ದಾಗಲೆಲ್ಲ ಪದೇ ಪದೇ ಎದುರಾದ ’ನೀನ್ ದೇಶಕಾಲ ಓದಲ್ಲ್ವಾ/ನೋಡಿಲ್ಲ್ವಾ’ ಪ್ರಶ್ನೆಗಳಿಂದ ಓಹ್ ಇದನ್ನ್ ಒಂದ್ಸಲ ನೋಡ್ಬೇಕು ಅನ್ನಿಸಿದ್ದ್ರೂ ಅದು ಅಲ್ಲಿಗೇ ನಿಂತಿತ್ತು.

ಈಚೆಗೆ ಬರಿಯೋದು ಕಮ್ಮಿ, ಓದೋದು ಜಾಸ್ತಿ ಮಾಡ್ಬೇಕು ಅನ್ನಿಸಿ, ಕುವೆಂಪು-ಕಾರಂತರಾಚೆ ಕನ್ನಡ ಓದಿದ್ದು ಸಾಲ‍ದು ಅಂತ ಜ್ಞಾನೋದಯ ಆಗಿ, ಅಲ್ಲಿ ಇಲ್ಲಿ ಪುಸ್ತಕ ಹುಡುಕ್ತಾ, ಕೈಗೆ ಸಿಕ್ಕಿದ್ದ್ ಓದುತ್ತಾ ಇಂಟರ್ನೆಟ್ ಅನ್ನೋ ಬಲೆಯಲ್ಲಿ ಕನ್ನಡ ಜಾಲಾಡ್ತಾ ಸಿಕ್ಕಪಕ್ಕ ಬ್ಲಾಗುಗಳು, ವೆಬ್‍ಸೈಟ್‍ಗಳನ್ನ ಹಿಗ್ಗಾಮುಗ್ಗಾ ಓದ್ತಾ ಕಾಳು-ಜೊಳ್ಳುಗಳ ಮಧ್ಯೆ ಮುಗ್ಗರಿಸ್ತಿದ್ದ ಹೊತ್ತಿಗೆ ’ದೇಶಕಾಲ’ಕ್ಕೆ ಮೂರು ತುಂಬಿದ ಸಂಭ್ರಮ ಎಲ್ಲಾ ಕಡೆ ಕೇಳಿಬಂದದ್ದು ಯಾವ ಸಚಿನ್‍ನೂ ಮೀರಿಸೋ ಟೈಮಿಂಗು ಅಂತ ನನ್ನ್ ಅಭಿಪ್ರಾಯ. ನೀನಾಸಂ ಶಿಬಿರಕ್ಕೆ ಹೋಗೋ ಅವಕಾಶವೂ ಈ ಸಲ ಬಂದು, ಅಲ್ಲಿ ಮತ್ತೆ ದೇಶಕಾಲದ ವಲಯದಲ್ಲಿ ಮುಳುಗೆದ್ದು ಬೆಂಗ್ಳೂರಿಗೆ ಬಂದಿಳಿದ್ರೆ ಮತ್ತೆ ನಮ್ಮ ಐ ಎಫ್ ಏ ನ್ಯೂಸ್‍ಲೆಟರು, ಸಂಪದ, ಎಲ್ಲಾ ಸೇರಿ ದೇಶಕಾಲ-ಜಪ ಮುಂದುವರೆಸಿಬಿಟ್ಟಿದ್ವು! ಇನ್ನು ಸಬ್‍ಸ್ಕ್ರೈಬಿಸದೇ ದಾರಿಯಿಲ್ಲ ಅಂತ ಚೆಕ್ ಬರೆದು, ನನ್ನ ಎಂದಿನ ಸೋಮಾರಿತನದ ದೆಸೆಯಿಂದ ಒಂದು ವಾರ ಬಿಟ್ಟು ಪೋಸ್ಟಿಸಿ ಇನ್ನೂ ಸುಧಾರಿಸ್ಕೋತಿದ್ದೆ. ಎರಡನೇ ದಿನಕ್ಕೇ ಕೊರಿಯರ್ ಬಂದುಬಿಡೋದಾ?! ನೀನಾಸಂನಲ್ಲಿ ವಿವೇಕ್ ಶಾನಭಾಗರನ್ನ ದೂರದಿಂದ ನೋಡಿ ಈ ಮನುಷ್ಯ ಎಷ್ಟು ತಣ್ಣಗಿರ್ತಾರಪ್ಪ ಅಂತ ಅಚ್ಚರಿಪಟ್ಟಿದ್ದೆ. ಅವರ ಸದ್ದುಗದ್ದಲವಿಲ್ಲದ ಎಫಿಶಿಯೆನ್ಸಿಯ ಬಗ್ಗೆ ಈಗಾಗ್ಲೇ ಕೇಳಿದ್ರೂ ಇದನ್ನ ಅರಗಿಸಿಕೊಳ್ಳೋಕೆ ಸ್ವಲ್ಪ ಸಮಯವೇ ಬೇಕಾಯ್ತು!

ಸಾಹಿತ್ಯದ ವಿದ್ಯಾರ್ಥಿಯಾಗಿದ್ದೂ ಕನ್ನಡಸಾಹಿತ್ಯವನ್ನ ಫಾರ್ಮಲ್ ಆಗಿ ಓದದ ಕಾರಣ ಮೊದಲಸಲ ಕನ್ನಡಸಾಹಿತ್ಯಕ್ಕೆ ಮೀಸಲಿಟ್ಟ ಜರ್ನಲ್ ಕೈಯ್ಯಲ್ಲಿ ಹಿಡಿದಾಗ ಹುಟ್ಟಿದ ಎಂತೋ ಏನೋ, ಕನ್ನಡವೇ ಪರಕೀಯವೆನಿಸಿ ಅತಂತ್ರದಲ್ಲಿ ಮುಳುಗಿಬಿಡ್ತೀನೇನೋ ಅನ್ನೋ ಅನುಮಾನಗಳನ್ನೂ, ಓದಿ ನೋಡಬೇಕು ಅನ್ನೋ ಹಂಬಲವನ್ನೂ ಪಕ್ಕದಲ್ಲಿ ಕೂಡಿಸಿಕೊಂಡು ಪುಟ ತೆರೆದೇ ಬಿಟ್ಟೆ.

ಸಂಪಾದಕೀಯದಲ್ಲೇ ಸೃಜನಶೀಲ ಸಾಹಿತ್ಯಕ್ಕೆ ಅನುಭವ-ಚಿಂತನೆಗಳೆರಡರ ಅಗತ್ಯದ ಕುರಿತು ಹೇಳುತ್ತಾ, ವೈಚಾರಿಕತೆಯ ಹೆಸರಿನ ಗೊಡ್ಡು ಅಕೆಡೆಮಿಕ್ ಭಯೋತ್ಪಾದನೆಯನ್ನೂ, ವೈಚಾರಿಕತೆಯನ್ನು ಸಾರಾಸಗಟಾಗಿ ನಿರ್ಜೀವ ಪಾಂಡಿತ್ಯ ಅಂತ ಪಕ್ಕಕ್ಕೆ ತಳ್ಳೋ ಸೋಮಾರಿತನವನ್ನೂ ಒಂದೇ ಸಲ ನಿವಾಳಿಸಿಹಾಕಿದ ವಿವೇಕರ ನಿರ್ದಾಕ್ಷಿಣ್ಯ ಮಾತುಗಳು ಭಾವ-ಬುದ್ಧಿಗಳ ಬ್ಯಾಲನ್ಸ್ ಏನಿರಬೇಕನ್ನೋ ಹುಡುಕಾಟಕ್ಕೆ food for thought ಆಗಿ ಸಂದವು.
ಪುಟಗಳು ತಿರುವಿಹಾಕ್ತಿದ್ದ ಹಾಗೇ ಅಲ್ಲಲ್ಲಿ ಓದಿದ್ದ - ಕೇಳಿದ್ದ ಹೆಸರುಗಳು ಕಂಡು, ಅಬ್ಬಾ! ನೆಲೆ ಕಂಡೆ ಅನ್ನೋ ಸಮಾಧಾನ ಗಟ್ಟಿಯಾಗ್ತಾ ಹೋಯ್ತು. ಕಸ್ತೂರಿಯ ಪುಸ್ತಕವಿಭಾಗದಲ್ಲಿ ಬರುತ್ತಿದ್ದ ಅನುವಾದಗಳನ್ನ ಓದ್ತಿದ್ದಾಗ ಅನುವಾದಿತ ಸಾಹಿತ್ಯದಲ್ಲಿ ಎರಡು ಭಾಷೆ-ಸಂಸ್ಕೃತಿಗಳ negotiationನಲ್ಲಿ ಹುಟ್ಟುವ ವಿಚಿತ್ರ-ವಿಶಿಷ್ಟ ಸೊಗಡಿನಲ್ಲಿ ಕಳೆದುಹೋಗುತ್ತಿದ್ದೆ. ಆ ಅನುಭವವನ್ನ ವಿವೇಕ್ ಹಾಗೂ ಜಯಂತ್ ಕಾಯ್ಕಿಣಿಯವರು ಅನುವಾದಿಸಿರೋ ಐಸಾಕ್ ಬಾಶೆವಿಸ್ ಸಿಂಗರ್‍ನ ಕಥೆ ’ಮಳ್ಳ ಗಿಂಪೆಲ್’ ಮತ್ತೆ ನೆನಪಿಸಿತು.

ನಾನ್ಯಾಕೆ ಕಥೆ ಬರೆದಿಲ್ಲ ಅನ್ನೋದು ಈ ಸಲದ ಸಮಯಪರೀಕ್ಷೆಯಲ್ಲಿ ಕಥೆಗಾರರ ಬರಹಗಳನ್ನ ಹಾಗೂ ನಾನು ಇತ್ತೀಚೆಗೆ ಓದಿ ಮುಗಿಸಿದ ಇಂಗ್ಲಿಷ್ ಕಾದಂಬರಿ - ಲುನಾಟಿಕ್ ಇನ್ ಮೈ ಹೆಡ್ - ಓದುತ್ತಿದ್ದಂತೆ ಒಂದಿಷ್ಟು ಸ್ಪಷ್ಟವಾಗೋಕೆ ಷುರುವಾಯ್ತು. ಎಷ್ಟೋಸಲ ಅಂತರ್ಜಾಲದಲ್ಲಿ ಅಂತರಪಿಶಾಚಿಯಾಗಿ ಅಲೀತಿರುವಾಗ ದೊಡ್ಡ ಹೆಸರುಗಳ / ಅವರಂತೆ ಬರಿಯಹೋಗುವ ಮರಿಬರಹಗಾರರ ಕಥೆಗಳನ್ನೋದಿ ಕೊನೆಗೆ ಏನೂ ಅರ್ಥವಾಗದೇ ತಬ್ಬಿಬ್ಬಾಗಿ ನನ್ನ ಸಾಹಿತ್ಯಾಭ್ಯಾಸ ಕನ್ನಡಕ್ಕೆ ಸಲ್ಲದ್ದೋ, ಅಥವಾ ಕಲಿತದ್ದು ನಾನೇ ಮರೆತಿದ್ದೀನೋ, ಅಥವಾ ೨-೩ ವರ್ಷದಲ್ಲೇ ಔಟ್‍ಡೇಟೆಡ್ ಆಗಿಬಿಟ್ಟೆನೋ ಅನ್ನಿಸೋ ದಿಗ್ಭ್ರಾಂತಿಯ ಕ್ಷಣಗಳಿಗೆ ಇಲ್ಲಿ ವಸುಧೇಂದ್ರರ ಮಾತುಗಳು ಸಮಾಧಾನ ಹೇಳಿದವು! ಮಹಿಳಾ ಸಾಹಿತ್ಯದ ಬಗೆಗೆ ಸುಕನ್ಯಾ ಕನಾರಳ್ಳಿಯವರ ಸಾಲುಗಳನ್ನೋದುತ್ತಿದ್ದಾಗ ಫಣಿಯಮ್ಮನೊಂದಿಗಿನ ಎಂ ಫಿಲ್ ಯಾತ್ರೆಯ de javu ಭಾವನೆ....some shared grounds... ಡಯಸ್ಪೋರಾ ಕನ್ನಡಿಗರನ್ನ ಕಾಡೊ ಐಡೆಂಟಿಟಿ ಪಾಲಿಟಿಕ್ಸ್ ಬೆಂಗ್ಳೂರ್ ಕನ್ನಡಿಗರನ್ನೇನ್ ಬಿಟ್ಟಿಲ್ಲ ಅನ್ನಿಸಿಬಿಟ್ಟಾಗ ಆ shared grounds ಭಾವನೆಗೆ ಒಂದು ವಿಷಾದದ ನಂಟು...
ತೆರೆಮರೆಗಳಿಲ್ಲದೇ ಅತ್ಯಂತ ಪ್ರಾಮಾಣಿಕವಾಗಿ, ಸರಳವಾಗಿ ತನ್ನ ಕಥನ ಸತ್ಸಂಗದ ಸಾಂಗತ್ಯ ಅಂದುಬಿಡೋ ಸುನಂದಾ ಪ್ರಕಾಶ ಕಡಮೆ, ಆಲ್ಟರ್ ಈಗೋದ ಜೊತೆಯ ಸಂಭಾಷಣೆಯಾಗಿ ತಮ್ಮ ಕಥನದ ಕಥೆ ಬಿಚ್ಚಿಟ್ಟು ಪ್ರಶ್ನೆಗಳೆಬ್ಬಿಸೋ ಗುರುಪ್ರಸಾದ್ ಕಾಗಿನೆಲೆ...

ಹಲವು ಪ್ರಶ್ನೆಗಳಿಗೆ ಉತ್ತರಗಳು, ಇನ್ನೊಂದಷ್ಟು ಹೊಸ ಪ್ರಶ್ನೆಗಳು, ನನ್ನೊಳಗಿನ ಬರಹದ ತುಡಿತಕ್ಕೆ, ಬರೆಯಲಾರೆ ಅನ್ನಿಸೋ ಕ್ಷಣಗಳಿಗೆ... familiar ಅನ್ನಿಸುತ್ತಲೇ ಹೊಸ ವಿಚಾರಗಳನ್ನ ತೆರೆದಿಡುತ್ತ ಅತೀ ವೇಗದಲ್ಲಿ ಆತ್ಮೀಯರಾಗಿಬಿಡೋ ಜನರೊಂದಿಗಿನ ಸಹಚರ್ಯದಂತೆ ’ದೇಶಕಾಲ’ದ ಸಾಂಗತ್ಯ ಅನಿಸಿಬಿಡ್ತು. ಒಂದೊಂದು ಸಾಲೂ ಚಪ್ಪರಿಸಿ ಸವಿದಿದ್ದೀನಿ. ಒಂದೆರಡು ಬರಹಗಳನ್ನ ಹಬ್ಬದ ಹೋಳಿಗೆಯಂತೆ ನಾಳೆಗೆ ಉಳಿಸಿಕೊಂಡಿದ್ದೀನಿ, ಏಪ್ರಿಲ್ ಹದಿನೈದರ ವರೆಗೆ ಮುಂದಿನ ಸಂಚಿಕೆಗೆ ಕಾಯ್‍ಬೇಕಲ್ಲ!

ಅಂದಹಾಗೆ ಸಬ್‍ಸ್ಕ್ರಿಪ್ಶನ್ ಕಳಿಸೋವಾಗ ಹಿಂದಿನ ಸಂಚಿಕೆಗಳು ಸಿಗುತ್ವಾ ಅಂತ ಕೇಳಿದ ಒಂದು ಸಾಲಿಗೆ ಯಾವ್ ಯಾವ್ ಸಂಚಿಕೆಗಳು ಲಭ್ಯ ಅಂತ ದೇಶಕಾಲ ಟೀಮ್‍ನ ಎಸ್ಸೆಮ್ಮೆಸ್ಸೂ ಬಂತು ಅನ್ನೋದು ಈಗ ಅಷ್ಟೊಂದು ಆಶ್ಚರ್ಯದ ವಿಷ್ಯ ಅನ್ನಿಸಲ್ಲ್ವೇನೋ!

ಹಾಂ, ಮತ್ತೆ ಹೊದಿಕೆಯ ವಿನ್ಯಾಸದಲ್ಲಿನ ಕಥೆಗಾರರ ಹೆಸರಿನ ಯಾದಿಯಲ್ಲಿ ನಮ್ಮ ಬ್ಲಾಗಿಗರ ಹೆಸರುಗಳು ಅಲ್ಲಲ್ಲಿ ಮಿನುಗಿದ್ದೂ ವಾವ್ ಅನ್ನಿಸಿದ್ ವಿಷ್ಯ!

Friday, February 01, 2008

ಕಳೆಯದ ನಿನ್ನೆ
ಕೈಜಾರಿದ ನಾಳೆಗಳ ನಡುವೆ
ನಿಟ್ಟುಸಿರೊಂದಕ್ಕೆ
ನಿದ್ದೆಗೊಮ್ಮೆ ನಿತ್ಯಮರಣ
ಎದ್ದ ಸಲ ನವೀನ ಜನನ!

(ಕನ್ನಡ ಬ್ಲಾಗ್ ಲೋಕದ ಲೇಟೆಸ್ಟ್ ಸಾಂಕ್ರಾಮಿಕ - ಚುಟುಕರೋಗ, ಇದನ್ನು ಕವಿತೆಯಾಗಿ ಬೆಳೆಸದ ನನ್ನ ಸೋಮಾರಿತನಕ್ಕೆ ಎಕ್ಸ್‌ಕ್ಯೂಸ್!)