Showing posts with label ಸಾಹಿತ್ಯ. Show all posts
Showing posts with label ಸಾಹಿತ್ಯ. Show all posts

Wednesday, February 20, 2008

ದೇಶಕಾಲದ ನಂಟು

ಕೆಲಸಕ್ಕೆ ಸೇರಿದ್ ಹೊಸದರಲ್ಲಿ ಊರಿಗೆಲ್ಲ ಒಬ್ಬಳೇ ಪದ್ಮಾವತಿಯಂತೆ ಅಲ್ಲಿದ್ದ ಆಲ್‍ಮೋಸ್ಟ್ ಏಕೈಕ(ಆಗ) ಕನ್ನಡ ಓದುಗಳಾಗಿ ಮೆರೀತಿದ್ದಾಗ, ಕನ್ನಡದ little magazineಗಳ ಬಗ್ಗೆ ಮಾಹಿತಿ ಹುಡುಕ್ತಿದ್ದಾಗಲೆಲ್ಲ ಪದೇ ಪದೇ ಎದುರಾದ ’ನೀನ್ ದೇಶಕಾಲ ಓದಲ್ಲ್ವಾ/ನೋಡಿಲ್ಲ್ವಾ’ ಪ್ರಶ್ನೆಗಳಿಂದ ಓಹ್ ಇದನ್ನ್ ಒಂದ್ಸಲ ನೋಡ್ಬೇಕು ಅನ್ನಿಸಿದ್ದ್ರೂ ಅದು ಅಲ್ಲಿಗೇ ನಿಂತಿತ್ತು.

ಈಚೆಗೆ ಬರಿಯೋದು ಕಮ್ಮಿ, ಓದೋದು ಜಾಸ್ತಿ ಮಾಡ್ಬೇಕು ಅನ್ನಿಸಿ, ಕುವೆಂಪು-ಕಾರಂತರಾಚೆ ಕನ್ನಡ ಓದಿದ್ದು ಸಾಲ‍ದು ಅಂತ ಜ್ಞಾನೋದಯ ಆಗಿ, ಅಲ್ಲಿ ಇಲ್ಲಿ ಪುಸ್ತಕ ಹುಡುಕ್ತಾ, ಕೈಗೆ ಸಿಕ್ಕಿದ್ದ್ ಓದುತ್ತಾ ಇಂಟರ್ನೆಟ್ ಅನ್ನೋ ಬಲೆಯಲ್ಲಿ ಕನ್ನಡ ಜಾಲಾಡ್ತಾ ಸಿಕ್ಕಪಕ್ಕ ಬ್ಲಾಗುಗಳು, ವೆಬ್‍ಸೈಟ್‍ಗಳನ್ನ ಹಿಗ್ಗಾಮುಗ್ಗಾ ಓದ್ತಾ ಕಾಳು-ಜೊಳ್ಳುಗಳ ಮಧ್ಯೆ ಮುಗ್ಗರಿಸ್ತಿದ್ದ ಹೊತ್ತಿಗೆ ’ದೇಶಕಾಲ’ಕ್ಕೆ ಮೂರು ತುಂಬಿದ ಸಂಭ್ರಮ ಎಲ್ಲಾ ಕಡೆ ಕೇಳಿಬಂದದ್ದು ಯಾವ ಸಚಿನ್‍ನೂ ಮೀರಿಸೋ ಟೈಮಿಂಗು ಅಂತ ನನ್ನ್ ಅಭಿಪ್ರಾಯ. ನೀನಾಸಂ ಶಿಬಿರಕ್ಕೆ ಹೋಗೋ ಅವಕಾಶವೂ ಈ ಸಲ ಬಂದು, ಅಲ್ಲಿ ಮತ್ತೆ ದೇಶಕಾಲದ ವಲಯದಲ್ಲಿ ಮುಳುಗೆದ್ದು ಬೆಂಗ್ಳೂರಿಗೆ ಬಂದಿಳಿದ್ರೆ ಮತ್ತೆ ನಮ್ಮ ಐ ಎಫ್ ಏ ನ್ಯೂಸ್‍ಲೆಟರು, ಸಂಪದ, ಎಲ್ಲಾ ಸೇರಿ ದೇಶಕಾಲ-ಜಪ ಮುಂದುವರೆಸಿಬಿಟ್ಟಿದ್ವು! ಇನ್ನು ಸಬ್‍ಸ್ಕ್ರೈಬಿಸದೇ ದಾರಿಯಿಲ್ಲ ಅಂತ ಚೆಕ್ ಬರೆದು, ನನ್ನ ಎಂದಿನ ಸೋಮಾರಿತನದ ದೆಸೆಯಿಂದ ಒಂದು ವಾರ ಬಿಟ್ಟು ಪೋಸ್ಟಿಸಿ ಇನ್ನೂ ಸುಧಾರಿಸ್ಕೋತಿದ್ದೆ. ಎರಡನೇ ದಿನಕ್ಕೇ ಕೊರಿಯರ್ ಬಂದುಬಿಡೋದಾ?! ನೀನಾಸಂನಲ್ಲಿ ವಿವೇಕ್ ಶಾನಭಾಗರನ್ನ ದೂರದಿಂದ ನೋಡಿ ಈ ಮನುಷ್ಯ ಎಷ್ಟು ತಣ್ಣಗಿರ್ತಾರಪ್ಪ ಅಂತ ಅಚ್ಚರಿಪಟ್ಟಿದ್ದೆ. ಅವರ ಸದ್ದುಗದ್ದಲವಿಲ್ಲದ ಎಫಿಶಿಯೆನ್ಸಿಯ ಬಗ್ಗೆ ಈಗಾಗ್ಲೇ ಕೇಳಿದ್ರೂ ಇದನ್ನ ಅರಗಿಸಿಕೊಳ್ಳೋಕೆ ಸ್ವಲ್ಪ ಸಮಯವೇ ಬೇಕಾಯ್ತು!

ಸಾಹಿತ್ಯದ ವಿದ್ಯಾರ್ಥಿಯಾಗಿದ್ದೂ ಕನ್ನಡಸಾಹಿತ್ಯವನ್ನ ಫಾರ್ಮಲ್ ಆಗಿ ಓದದ ಕಾರಣ ಮೊದಲಸಲ ಕನ್ನಡಸಾಹಿತ್ಯಕ್ಕೆ ಮೀಸಲಿಟ್ಟ ಜರ್ನಲ್ ಕೈಯ್ಯಲ್ಲಿ ಹಿಡಿದಾಗ ಹುಟ್ಟಿದ ಎಂತೋ ಏನೋ, ಕನ್ನಡವೇ ಪರಕೀಯವೆನಿಸಿ ಅತಂತ್ರದಲ್ಲಿ ಮುಳುಗಿಬಿಡ್ತೀನೇನೋ ಅನ್ನೋ ಅನುಮಾನಗಳನ್ನೂ, ಓದಿ ನೋಡಬೇಕು ಅನ್ನೋ ಹಂಬಲವನ್ನೂ ಪಕ್ಕದಲ್ಲಿ ಕೂಡಿಸಿಕೊಂಡು ಪುಟ ತೆರೆದೇ ಬಿಟ್ಟೆ.

ಸಂಪಾದಕೀಯದಲ್ಲೇ ಸೃಜನಶೀಲ ಸಾಹಿತ್ಯಕ್ಕೆ ಅನುಭವ-ಚಿಂತನೆಗಳೆರಡರ ಅಗತ್ಯದ ಕುರಿತು ಹೇಳುತ್ತಾ, ವೈಚಾರಿಕತೆಯ ಹೆಸರಿನ ಗೊಡ್ಡು ಅಕೆಡೆಮಿಕ್ ಭಯೋತ್ಪಾದನೆಯನ್ನೂ, ವೈಚಾರಿಕತೆಯನ್ನು ಸಾರಾಸಗಟಾಗಿ ನಿರ್ಜೀವ ಪಾಂಡಿತ್ಯ ಅಂತ ಪಕ್ಕಕ್ಕೆ ತಳ್ಳೋ ಸೋಮಾರಿತನವನ್ನೂ ಒಂದೇ ಸಲ ನಿವಾಳಿಸಿಹಾಕಿದ ವಿವೇಕರ ನಿರ್ದಾಕ್ಷಿಣ್ಯ ಮಾತುಗಳು ಭಾವ-ಬುದ್ಧಿಗಳ ಬ್ಯಾಲನ್ಸ್ ಏನಿರಬೇಕನ್ನೋ ಹುಡುಕಾಟಕ್ಕೆ food for thought ಆಗಿ ಸಂದವು.
ಪುಟಗಳು ತಿರುವಿಹಾಕ್ತಿದ್ದ ಹಾಗೇ ಅಲ್ಲಲ್ಲಿ ಓದಿದ್ದ - ಕೇಳಿದ್ದ ಹೆಸರುಗಳು ಕಂಡು, ಅಬ್ಬಾ! ನೆಲೆ ಕಂಡೆ ಅನ್ನೋ ಸಮಾಧಾನ ಗಟ್ಟಿಯಾಗ್ತಾ ಹೋಯ್ತು. ಕಸ್ತೂರಿಯ ಪುಸ್ತಕವಿಭಾಗದಲ್ಲಿ ಬರುತ್ತಿದ್ದ ಅನುವಾದಗಳನ್ನ ಓದ್ತಿದ್ದಾಗ ಅನುವಾದಿತ ಸಾಹಿತ್ಯದಲ್ಲಿ ಎರಡು ಭಾಷೆ-ಸಂಸ್ಕೃತಿಗಳ negotiationನಲ್ಲಿ ಹುಟ್ಟುವ ವಿಚಿತ್ರ-ವಿಶಿಷ್ಟ ಸೊಗಡಿನಲ್ಲಿ ಕಳೆದುಹೋಗುತ್ತಿದ್ದೆ. ಆ ಅನುಭವವನ್ನ ವಿವೇಕ್ ಹಾಗೂ ಜಯಂತ್ ಕಾಯ್ಕಿಣಿಯವರು ಅನುವಾದಿಸಿರೋ ಐಸಾಕ್ ಬಾಶೆವಿಸ್ ಸಿಂಗರ್‍ನ ಕಥೆ ’ಮಳ್ಳ ಗಿಂಪೆಲ್’ ಮತ್ತೆ ನೆನಪಿಸಿತು.

ನಾನ್ಯಾಕೆ ಕಥೆ ಬರೆದಿಲ್ಲ ಅನ್ನೋದು ಈ ಸಲದ ಸಮಯಪರೀಕ್ಷೆಯಲ್ಲಿ ಕಥೆಗಾರರ ಬರಹಗಳನ್ನ ಹಾಗೂ ನಾನು ಇತ್ತೀಚೆಗೆ ಓದಿ ಮುಗಿಸಿದ ಇಂಗ್ಲಿಷ್ ಕಾದಂಬರಿ - ಲುನಾಟಿಕ್ ಇನ್ ಮೈ ಹೆಡ್ - ಓದುತ್ತಿದ್ದಂತೆ ಒಂದಿಷ್ಟು ಸ್ಪಷ್ಟವಾಗೋಕೆ ಷುರುವಾಯ್ತು. ಎಷ್ಟೋಸಲ ಅಂತರ್ಜಾಲದಲ್ಲಿ ಅಂತರಪಿಶಾಚಿಯಾಗಿ ಅಲೀತಿರುವಾಗ ದೊಡ್ಡ ಹೆಸರುಗಳ / ಅವರಂತೆ ಬರಿಯಹೋಗುವ ಮರಿಬರಹಗಾರರ ಕಥೆಗಳನ್ನೋದಿ ಕೊನೆಗೆ ಏನೂ ಅರ್ಥವಾಗದೇ ತಬ್ಬಿಬ್ಬಾಗಿ ನನ್ನ ಸಾಹಿತ್ಯಾಭ್ಯಾಸ ಕನ್ನಡಕ್ಕೆ ಸಲ್ಲದ್ದೋ, ಅಥವಾ ಕಲಿತದ್ದು ನಾನೇ ಮರೆತಿದ್ದೀನೋ, ಅಥವಾ ೨-೩ ವರ್ಷದಲ್ಲೇ ಔಟ್‍ಡೇಟೆಡ್ ಆಗಿಬಿಟ್ಟೆನೋ ಅನ್ನಿಸೋ ದಿಗ್ಭ್ರಾಂತಿಯ ಕ್ಷಣಗಳಿಗೆ ಇಲ್ಲಿ ವಸುಧೇಂದ್ರರ ಮಾತುಗಳು ಸಮಾಧಾನ ಹೇಳಿದವು! ಮಹಿಳಾ ಸಾಹಿತ್ಯದ ಬಗೆಗೆ ಸುಕನ್ಯಾ ಕನಾರಳ್ಳಿಯವರ ಸಾಲುಗಳನ್ನೋದುತ್ತಿದ್ದಾಗ ಫಣಿಯಮ್ಮನೊಂದಿಗಿನ ಎಂ ಫಿಲ್ ಯಾತ್ರೆಯ de javu ಭಾವನೆ....some shared grounds... ಡಯಸ್ಪೋರಾ ಕನ್ನಡಿಗರನ್ನ ಕಾಡೊ ಐಡೆಂಟಿಟಿ ಪಾಲಿಟಿಕ್ಸ್ ಬೆಂಗ್ಳೂರ್ ಕನ್ನಡಿಗರನ್ನೇನ್ ಬಿಟ್ಟಿಲ್ಲ ಅನ್ನಿಸಿಬಿಟ್ಟಾಗ ಆ shared grounds ಭಾವನೆಗೆ ಒಂದು ವಿಷಾದದ ನಂಟು...
ತೆರೆಮರೆಗಳಿಲ್ಲದೇ ಅತ್ಯಂತ ಪ್ರಾಮಾಣಿಕವಾಗಿ, ಸರಳವಾಗಿ ತನ್ನ ಕಥನ ಸತ್ಸಂಗದ ಸಾಂಗತ್ಯ ಅಂದುಬಿಡೋ ಸುನಂದಾ ಪ್ರಕಾಶ ಕಡಮೆ, ಆಲ್ಟರ್ ಈಗೋದ ಜೊತೆಯ ಸಂಭಾಷಣೆಯಾಗಿ ತಮ್ಮ ಕಥನದ ಕಥೆ ಬಿಚ್ಚಿಟ್ಟು ಪ್ರಶ್ನೆಗಳೆಬ್ಬಿಸೋ ಗುರುಪ್ರಸಾದ್ ಕಾಗಿನೆಲೆ...

ಹಲವು ಪ್ರಶ್ನೆಗಳಿಗೆ ಉತ್ತರಗಳು, ಇನ್ನೊಂದಷ್ಟು ಹೊಸ ಪ್ರಶ್ನೆಗಳು, ನನ್ನೊಳಗಿನ ಬರಹದ ತುಡಿತಕ್ಕೆ, ಬರೆಯಲಾರೆ ಅನ್ನಿಸೋ ಕ್ಷಣಗಳಿಗೆ... familiar ಅನ್ನಿಸುತ್ತಲೇ ಹೊಸ ವಿಚಾರಗಳನ್ನ ತೆರೆದಿಡುತ್ತ ಅತೀ ವೇಗದಲ್ಲಿ ಆತ್ಮೀಯರಾಗಿಬಿಡೋ ಜನರೊಂದಿಗಿನ ಸಹಚರ್ಯದಂತೆ ’ದೇಶಕಾಲ’ದ ಸಾಂಗತ್ಯ ಅನಿಸಿಬಿಡ್ತು. ಒಂದೊಂದು ಸಾಲೂ ಚಪ್ಪರಿಸಿ ಸವಿದಿದ್ದೀನಿ. ಒಂದೆರಡು ಬರಹಗಳನ್ನ ಹಬ್ಬದ ಹೋಳಿಗೆಯಂತೆ ನಾಳೆಗೆ ಉಳಿಸಿಕೊಂಡಿದ್ದೀನಿ, ಏಪ್ರಿಲ್ ಹದಿನೈದರ ವರೆಗೆ ಮುಂದಿನ ಸಂಚಿಕೆಗೆ ಕಾಯ್‍ಬೇಕಲ್ಲ!

ಅಂದಹಾಗೆ ಸಬ್‍ಸ್ಕ್ರಿಪ್ಶನ್ ಕಳಿಸೋವಾಗ ಹಿಂದಿನ ಸಂಚಿಕೆಗಳು ಸಿಗುತ್ವಾ ಅಂತ ಕೇಳಿದ ಒಂದು ಸಾಲಿಗೆ ಯಾವ್ ಯಾವ್ ಸಂಚಿಕೆಗಳು ಲಭ್ಯ ಅಂತ ದೇಶಕಾಲ ಟೀಮ್‍ನ ಎಸ್ಸೆಮ್ಮೆಸ್ಸೂ ಬಂತು ಅನ್ನೋದು ಈಗ ಅಷ್ಟೊಂದು ಆಶ್ಚರ್ಯದ ವಿಷ್ಯ ಅನ್ನಿಸಲ್ಲ್ವೇನೋ!

ಹಾಂ, ಮತ್ತೆ ಹೊದಿಕೆಯ ವಿನ್ಯಾಸದಲ್ಲಿನ ಕಥೆಗಾರರ ಹೆಸರಿನ ಯಾದಿಯಲ್ಲಿ ನಮ್ಮ ಬ್ಲಾಗಿಗರ ಹೆಸರುಗಳು ಅಲ್ಲಲ್ಲಿ ಮಿನುಗಿದ್ದೂ ವಾವ್ ಅನ್ನಿಸಿದ್ ವಿಷ್ಯ!

Sunday, October 14, 2007

ಕಳೆಯಬೇಕಿದೆ ನಿನ್ನ ಜೊತೆಯಲಿ ಒಂದು ಶ್ಯಾಮಲ ಸಂಜೆ

ನೀನಾಸಂ ಪಕ್ಕದ ’ಚರಕ’ದಲ್ಲಿ ಹಿಂದೆ ಓದಿ ಮೆಚ್ಚಿದ್ದ ಲೇಖಕಿ ನೇಮಿಚಂದ್ರರ ಇಲ್ಲಿಯವರೆಗಿನ ಕಥೆಗಳ ಸಂಗ್ರಹ ಕಣ್ಣಿಗೆ ಬಿತ್ತು. ’ಅಂಕಿತ’ದವರು ಹೊರತಂದಿರುವ ಈ ಸಂಗ್ರಹದಿಂದ("ಇಲ್ಲಿಯವರೆಗಿನ ನೇಮಿಚಂದ್ರರ ಕಥೆಗಳು", ೨೦೦೧) ಕೆಲವು ಕಥೆಗಳ ತುಣುಕುಗಳನ್ನ ಆಗೀಗ ಇಲ್ಲಿ ಹಂಚಿಕೊಳ್ಳೋ ಪ್ಲಾನ್ ಇದೆ. ಇಲ್ಲಿ ವಿಮರ್ಶೆಗಾಗಲೀ ಪೂರ್ತಿ ಕಥೆ ಹೇಳುವ ಗೋಜಿಗಾಗಲೇ ಹೋಗ್ತಿಲ್ಲ, ಸುಮ್ಮ್ನೆ ಕೆಲವು ಸಾಲುಗಳು...
ಸದ್ಯಕ್ಕೆ ’ಕಳೆಯಬೇಕಿದೆ ನಿನ್ನ ಜೊತೆಯಲಿ ಒಂದು ಶ್ಯಾಮಲ ಸಂಜೆ’:

ಕಳೆಯಬೇಕಿದೆ ನಿನ್ನ ಜೊತೆಯಲಿ
ಒಂದು ಶ್ಯಾಮಲ ಸಂಜೆ
ಬಾನು ಭುವಿಗಳ ಬಣ್ಣ ಬೆರೆಯುವ
ಒಂದು ಮೋಹಕ ಸಂಜೆ
ಕನಸು ನನಸಿನ ನಡುವಿನಂಚನು
ಅಳಿಸಿ ಹಾಕುವ ಸಂಜೆ
ಎದೆಯ ನೋವಿಗೆ ಕದವ ಹಾಕದೆ
ತೆರೆದು ತೋರುವ ಸಂಜೆ
ಕಣ್ಣ ಕತೆಗಳ ಬಿಡಿಸಿ ಹೇಳುವ
ಒಂದು ಕೋಮಲ ಸಂಜೆ
ನನ್ನ ನೋವಿನ ಅಂತರಾಳಕೆ
ನೀನು ಜಿಗಿಯುವ ಸಂಜೆ
ಹಿಡಿದು ಕೈಯನು ಬದುಕಿನೀಚೆಗೆ
ಎಳೆವ ಸಾಧ್ಯದ ಸಂಜೆ....

ಮತ್ತೆ ಗುಣುಗುಣಿಸಿದೆ... ’ಬದುಕಿನೀಚೆಗೆ ಎಳೆವೆ ಸಾಧ್ಯತೆ’ ಇತ್ತೆ? ಹೊರಟ ಅಹಲ್ಯೆಯನ್ನು ಹಿಡಿದು ನಿಲ್ಲಿಸಬಹುದಿತ್ತೆ? ನಮ್ಮಲ್ಲಿ ಒಂದು ಸಂಜೆ ಇತ್ತೆ ಅಹಲ್ಯೆಗಾಗಿ?


ಸಮಯದಲ್ಲೆಲ್ಲೋ ಕಳೆದುಹೋದ ಸ್ನೇಹ-ಸಂಬಂಧಗಳು.

"ಅಹಲ್ಯಾನ ನೋಡಿ ಕಲಿ, ಅವಳೂ ಫಸ್ಟ್ ಬರ್ತಾಳೆ, ರ್ಯಾಂಕ್ ಬರ್ತಾಳೆ, ಒಂದು ದಿನ ಎಗರಾಡಿದ್ದು ಕೇಳಿಲ್ಲ. ನಿನ್ನ ಬಾಯಿ ಊರಗಲ. ಎಲ್ಲಕ್ಕೂ ಯಾಕೆ, ಏನು, ಆಗೋಲ್ಲ ಅಂತಾನೇ ವಾದಿಸ್ತೀಯ... ಅದ್ಯಾವ ಗಳಿಗೇಲಿ ಸಾಗರಿಕಾ ಎಂದು ಹೆಸರಿಟ್ಟೆವೋ, ಸಮುದ್ರದ ಆರ್ಭಟ ಎಲ್ಲ ನಮ್ಮ ಮನೆಯೊಳಗೇ ನುಗ್ಗಿ ಬಂತು" ಅಮ್ಮ ಗೊಣಗುತ್ತಿದ್ದಳು.

ಮನಸ್ಸಿಗೆ ಸಮಾಧಾನವಿರಲಿಲ್ಲ. ಈ ಹುಚ್ಚಾಟದ ನಡುವೆ ಅಹಲ್ಯ ಎಲ್ಲಿಯೋ ಕಳೆದುಹೋಗುತ್ತಿದ್ದಾಳೆನಿಸಿತ್ತು. ಸುಖದ ಸುಳ್ಳಿನ ಜಾಲದಲ್ಲಿ ಸತ್ಯವನ್ನು ಮರೆಮಾಚುತ್ತಿದ್ದಾಳೆ, ವಾಸ್ತವವನ್ನು, ವರ್ತಮಾನವನ್ನು ನಿರಾಕರಿಸುತ್ತಿದ್ದಾಳೆನಿಸಿತು. ಈ ಬದುಕಿನಾಚಿನ ಸ್ವರ್ಗದ ಬಾಗಿಲು ತೋರಿಸಿ ಅವಳನ್ನಾಚೆಗೆ ಸೆಳೆವ ಭಯವಿತ್ತು. ... ಅವಳ ಅನುಭವಕ್ಕೆ ನಾ ಹೊರತಾಗಿದ್ದೆ. ನನ್ನ ಮಾತುಗಳೊಂದೂ ಅವಳನ್ನು ಸ್ಪರ್ಷಿಸುತ್ತಿರಲಿಲ್ಲ. ನಾ ತೋರುವ ಹಾದಿಗಳೆಲ್ಲ ಉದ್ದವಿದ್ದವು. ಸುಖದ ಗ್ಯಾರಂಟಿ ಕೊಟ್ಟ ಹಾದಿಗಳಲ್ಲ, ಹೋರಾಟದ ಹಾದಿಗಳು. ಆದರೆ ಗಟ್ಟಿ ನೆಲದ ಮೇಲೆ ಊರುವ ಹೆಜ್ಜೆಗಳವು. ಬದುಕಿನತ್ತ ಇಟ್ಟ ದಿಟ್ಟ ಹೆಜ್ಜೆಗಳು.

ಮನುಷ್ಯ ದ್ವೀಪವಾಗಿದ್ದ.... ಮತ್ತೆ ನೋಡಿದೆ ಹಿನ್ನೀರಿನತ್ತ. ಎಲ್ಲಿಯೋ ಅಹಲ್ಯೆಯ ದನಿ ಕೇಳಿಸಿತು. "ನೀ ಸಮುದ್ರ, ಪುಡಿಮಾಡಬಲ್ಲೆ ತೀರಕ್ಕೆ ಬಡಿ ಬಡಿದು ಬಂಡೆಗಳ... ನಾ ದಂಡೆಗಳ ನದುವೆ ಕಲ್ಲು ಬಂಡೆಗಳ ನಡುವೆ ಸಿಲುಕಿ ನಿಂತ ಹಿನ್ನೀರು. ನನ್ನ ಮಿತಿ ದಾಟಲಾರೆ..."

ಹಿನ್ನೀರ ಒಡಲಾಳದ ತಳಮಳ ನನಗೆ ತಿಳಿದಿತ್ತು. ಹೋದವರು ಮತ್ತೆ ಹಿಂತಿರುಗಿ ಬಾರರು. ಆದರೆ ಉಳಿಸಿಕೊಳ್ಳಬಹುದೇ ಉಳಿದವರನ್ನು? ಪ್ರಶ್ನೆ ಹೊತ್ತು ಹೊರಟೆ ಹೋಟಲಿನತ್ತ.

for a brief intro to the writer: http://www.deccanherald.com/Archives/dec21/artic6.asp

P.S.,: ಇಲ್ಲಿ ಬಂದು ಹತ್ತು ಸಾವಿರದ ಹಿಟ್ಟು ಕುಟ್ಟಿದವರಿಗೆಲ್ಲ ಧನ್ಯವಾದಗಳು!

Sunday, June 18, 2006

ಒಂದು retrospection?

ಬರೆದು ತಿಂಗಳ ಮೇಲಾಯ್ತು...ಎಲ್ಲಾ ಸ್ನೇಹಿತರ ಹತ್ರ ಬೈಸಿಕೊಂಡಾಯ್ತು...ಕನ್ನಡಸಾಹಿತ್ಯ.ಕಾಂ ನ ಸಂಪಾದಕೀಯದಲ್ಲಿ ನನ್ನ ಬ್ಲಾಗ್ ಬಗ್ಗೆ ನೋಡಿ ಟೆನ್ಶನ್ ಆಗಿದ್ದೂ ಆಯ್ತು... ವಿಷಯಗಳ, ಭಾವಗಳ backlog ಭಾರವಾಗಿ ಇನ್ನು ಬರ್ಯೋದೇ ಸರಿ ಅಂತ ಈಗ ಕೂತಿದೀನಿ. ನಿಮ್ಮಗಳ ದುರಾದೃಷ್ಟ ಇವತ್ತು!:))

ಕನ್ನಡಸಾಹಿತ್ಯ.ಕಾಂನಲ್ಲಿ ಶೇಖರ್ ಪೂರ್ಣ ಅವರ ಸಂಪಾದಕೀಯದ ಲಿಂಕ್ ಗೆಳೆಯರೊಬ್ಬ್ರು ಕಳಿಸಿದಾಗ ಓದಿ ಮೊದ್ಲಿಗೇನೋ ಸ್ವಲ್ಪ ಖುಷಿನೇ ಆಯ್ತು. ಅದೇ ಖುಷಿಯಲ್ಲಿ ನಾಕಾರು ಗೆಳೆಯರಿಗೆ ಮೈಲ್ ಮಾಡಿ ಲಿಂಕ್ ಕೊಟ್ಟಿದ್ದೂ ಆಯ್ತು. ಆದ್ರೆ ಆಮೆಲೆ ಹಾಗೇ ಕೂತಾಗ ಕೆಲವು ಪ್ರಶ್ನೆಗಳು ಬಂದ್ವು. ಇವತ್ತು ಅವುಗಳ್ ಬಗ್ಗೆನೇ ಮೊದ್ಲು ಬರೆದುಬಿಡ್ತೀನಿ.

ಬ್ಲಾಗ್ ಅನ್ನೋದು ಒಂದು ಮಾಧ್ಯಮ - ಅದನ್ನ್ ಯಾರ್ ಯಾರು ಹೇಗ್ ಬಳಸ್ಕೋತಾರೆ ಅವರವ್ರಿಗೆ ಬಿಟ್ಟಿದ್ದು... canonical ಸಾಹಿತ್ಯದ parameters ಅದಕ್ಕೆ apply ಮಾಡಬೇಕಾ? ಬೇರೆ ಭಾಷೆಗಳಲ್ಲಿ ಬ್ಲಾಗ್ ಗಳಿಗೆ ಇಷ್ಟು ಗಮನ ಕೊಡ್ತಿದಾರಾ? ಬ್ಲಾಗ್ ಅನ್ನೋದು ಮಲ್ಟಿನ್ಯಾಷನಲ್ ಗ್ಲೋಬಲಿಸ್ಮ್ ನ ಐಡಿಯಾಲಜಿಯನ್ನೂ ತನ್ನ ಜೊತೆಗೆ ತರುತ್ತೆ. ಕಂಪ್ಯೂಟರ್ ಇದ್ದವ್ರಿಗೆಲ್ಲ ಖಾಲಿ ಸ್ಲೇಟ್ ಒದಗಿಸುತ್ತೆ. ಅದರಲ್ಲಿ ಸಾಹಿತ್ಯವೇ ಗೀಚ್ಬಹುದು, ಕಾಡು ಹರಟೆಯನ್ನೇ ಕುಟ್ಟ್ಬಹುದು, ಡೈರಿನೇ ಬರೆದಿಡ್ಬಹುದು. ಬರೆದದ್ದೆಲ್ಲ ಸಾಹಿತ್ಯ ಆಗೊಲ್ಲ ಅಲ್ಲ್ವ?

ಹೀಗೇ ಯೋಚಿಸ್ತಾ ನಾನ್ ಯಾಕೆ ಬ್ಲಾಗ್ ಬರೀತೀನಿ ಅಂತ ಪ್ರಶ್ನೆನೂ ಬಂತು. ಸುಮ್ಮ್ನೆ ಒಂದ್ಸಲ ಇಲ್ಲಿಯವರ್ಗೆ ಬರೆದಿದ್ದನ್ನ ನೋಡ್ದೆ...ಶೇಖರ್ ಸರ್ ಹೇಳಿರೋಹಾಗೆ ಯಾವ್ದೋ ಭಾವಜೀವನದ ತುಣುಕುಗಳೆ ಹೆಚ್ಚು ಕಂಡ್ವು. ಆದ್ರೆ ಅದನ್ನ್ ಬಿಟ್ಟು ಬೇರೆ ಥರದವೂ ಇವೆ. ಆದ್ರೆ ನೋಡ್ತಾ ನೋಡ್ತಾ ಭಾವಗಳ ಭರಪೂರಕ್ಕಿರೋ ಶಕ್ತಿ ಇಲ್ಲದೇ ಸುಮ್ಮ್ನೆ ತೋಚಿದ್ದು ಗೀಚಿದ್ದು, ಕೆಲವು ಬರೀಬೇಕನ್ನೋ ಬಲವಂತಕ್ಕೆ ಬರೆದಿದ್ದೇನೋ ಅಂತಲೂ ಅನ್ನಿಸ್ತು. ಹಾಗೇ ನಾನ್ಯಾವ ಘನವಾದ ಸಾಹಿತ್ಯ ರಚನೆಯಲ್ಲಿ ತೊಡಗಿದೀನಿ ಅನ್ನೋ ಭ್ರಮೆ ನನ್ನನೇನ್ ಕಾಡಿಲ್ಲ ಅನ್ನಿಸ್ತು...
'ವನಸುಮದೊಲೆನ್ನ...'ಬ್ಲಾಗ್ ನನ್ನಷ್ಟಕ್ಕೆ ನಾನು ನನ್ನಿಷ್ಟಕ್ಕೆ ಬೇಕಾದ್ದು ಗೀಚಿ ಹಾಕುವ ಗ್ರಾಫಿಟಿ ಗೋಡೆ ಆಗಿದೆ ಅನ್ನಿಸ್ತು...ಅದರ ಜೊತೆಗೇ ಸ್ನೇಹಿತರೊಬ್ಬರು ಇದು loss of relative privacy ಅಂತ ಹೇಳಿದ್ದ್ ಮಾತೂ ನೆನಪಾಯ್ತು...ತೀರ ನನ್ನಷ್ಟಕ್ಕೆ ಬರಿಯೋಕೆ ಡೈರಿ ಇದೆಯಲ್ಲ ಅನ್ನೋ ಮಾತೂ ಮನಸ್ಸಲ್ಲಿ ಹಾದು ಹೋಯ್ತು. ನಾಕು ಜನ ಓದ್ಲಿ ಅನ್ನೋ ಆಸೆ ಎಲ್ಲೋ ಒಂದುಕಡೆ ಇದ್ದೇ ಇದೆ, ನಿಜ, ಅದರ್ ಬಗ್ಗೆ apologetic ಆಗಬೇಕಿಲ್ಲ, ಹಾಗಂತ ನಾಕ್ ಜನ ಓದ್ತಾಅರೆ ಅನ್ನೋ ಮಾತ್ರಕ್ಕೆ ಇದು ಯಾವ್ದೇ ಸೀರಿಯಸ್ ಸಾಹಿತ್ಯಿಕ ಆಸಕ್ತಿಗಳಿಗೆ alternative ಆಗೋದಿಲ್ಲ ಅನ್ನೋ ನಂಬಿಕೆ...

ಬರಿಯೋದು ಖುಷಿಯ ಕೆಲ್ಸ ಅಂತ ಬ್ಲಾಗಿಗೆ ತಗುಲಿಕೊಂಡಿದ್ದೀನಿ...ಆದ್ರೆ ಬದುಕು attention ಕೇಳ್ದಾಗ ಬ್ಲಾಗ್ ಮೌನ ತಾಳುತ್ತೆ... ಸಹನೀಯವೋ ಅಸಹನೀಯವೋ, ನನ್ನ್ choice ಅದೇ... ನನ್ನನ್ನ ಹೊಗಳಿ, ತಿವಿದು, ಓಲೈಸಿ ಬರೀ ಅಂದ ಎಲ್ಲ ಗೆಳೆಯರಿಗೂ thanks:) ಜೀವನ extremes ಕಡೆ ಹೋಗದಿದ್ದಾಗಲೆಲ್ಲ ಇಲ್ಲಿ ಹರಟುತ್ತಾನೇ ಇರ್ತೀನಿ ಅಂತ promise ಮಾಡ್ತಾ...
ಶ್ರೀ