Sunday, March 16, 2008

ಕನ್ನಡ ಜಾಲಿಗರ ಮೀಟ್‌ - ಒಂದಷ್ಟು ಮೆಲುಕು

ಬ್ಲಾಗರ್ಸ್ ಮೀಟ್ ಬಗ್ಗೆ ಇ-ಮೈಲ್ ಗಳು, ಪೋಸ್ಟ್‌ಗಳು ಹಾರಾಡಿ ಇಲ್ಲೀವರೆಗೆ ಯುಆರೆಲ್ ಅಷ್ಟೆ ಆಗಿದ್ದವ್ರೆಲ್ಲರನ್ನ ಒಂದುಕಡೆ ಭೇಟಿಯಾಗೋ ಸಂಭ್ರಮ, excitementಗಳು ತುಳುಕಾಡಿ ಅಂತೂ ಇವತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌‍ನಲ್ಲಿ ಎಲ್ಲ ಸೇರುವಂತಾಯ್ತು. ನಾಲ್ಕಕ್ಕೆ ಕಾರ್ಯಕ್ರಮ ಅಂತ ಕಾಲು ಘಂಟೆ ಮುಂಚೆನೇ ಹೋಗಿ ಸೇರಿದವಳಿಗೆ ಇವರ್ ಬಿಟ್ಟ್ ಅವರ್ ಬಿಟ್ಟ್ ಇವರ್ ಬಿಟ್ಟು ಅವರ್ ಬಿಟ್ಟ್ ಇವರ್ಯಾರು ಅಂತ ತೆರೆದ ಕಣ್ಣಲ್ಲೇ ಗೆಸ್ಸಿಂಗ್ ಗೇಮ್‌ ಷುರು ಆಗಿತ್ತು. ಕಡೇ ಪಕ್ಷ ಈ ಮೀಟಿಗೆ ಆಹ್ವಾನ ಕಳಿಸಿದ್ದವರನ್ನಾದ್ರೂ ಸರಿಯಾಗಿ ಗುರುತಿಸಬೇಕು ಅಂತ ಆರ್ಕುಟ್ ಆಲ್ಬಂಗಳಿಗೆ ಭೇಟಿ ಕೊಟ್ಟಿದ್ರೂ ಕೊನೆಗೆ ಸಹಾಯಕ್ಕೆ ಬಂದದ್ದು ಯುಆರ್‌ಎಲ್‌ಗಳೇ!:)) ಯಾರಿರಬಹುದು ಅಂತ ಗೆಸ್ ಮಾಡ್ತಾ, ಪರಿಚಯ ಮಾಡಿಕೊಳ್ತಾ, ಮಾಡಿಸ್ತಾ...ನಾಕೂವರೆ ಸುಮಾರಿಗೆ ಕಾರ್ಯಕ್ರಮ ಷುರುವಾಯ್ತು. ಕಾರ್ಯಕ್ರಮದ ವರದಿ ಇಲ್ಲಿ ಮಾಡೋ ಸಾಹಸಕ್ಕೆ ಹೋಗಲ್ಲ, ಅದು ನಿಮಗೆ ಬೇರೆ ಕಡೆಯೂ ಸಿಗುತ್ತೆ ಅನ್ನೋ ನಂಬಿಕೆಯೂ ಇರೋದ್ರಿಂದ!:) ಕಾರ್ಯಕ್ರಮಕ್ಕೆ ನನ್ನ ಪ್ರತಿಕ್ರಿಯೆಗಳು, ನನ್ನಲ್ಲಿ ಎದ್ದ ಕೆಲವು ಪ್ರಶ್ನೆಗಳು, ಒಂದಿಷ್ಟು ಖುಷಿ - ಇವುಗಳು ಈಗ ಇಲ್ಲಿ ನಿಮಗಾಗಿ.

ಮೊದಲನೇದಾಗಿ ಅಷ್ಟು ಜನ ಕನ್ನಡ ಬ್ಲಾಗರ್ಸ್ ಒಟ್ಟು ಸೇರಿದ್ದೇ ತುಂಬಾ ಖುಷಿ ಕೊಟ್ಟ ವಿಷ್ಯ. ಅದಕ್ಕೆ ಪ್ರಣತಿಗೆ ಮೊದಲ ಥ್ಯಾಂಕ್ಸ್! ಅಂತರ್ಜಾಲದಲ್ಲಿ ಕನ್ನಡ ಬೆಳೆಸೋ ಪ್ರಯತ್ನ ಮಾಡ್ತಿರೋ ಅನುಭವಿಗಳನ್ನ ಕರೆಸಿ ಮಾತಾಡ್ಸಿದ್ದು apt ಅನ್ನಿಸ್ತು. ಕಾರ್ಯಕ್ರಮದ ಮೊದಲಿನ ಭಾಗದಲ್ಲಿ ಸುಮಾರು ಪಾಲು ತಾಂತ್ರಿಕ ಸಮಸ್ಯೆ-ಸವಾಲುಗಳ ಚರ್ಚೆಗೇ ಹೊರಟುಹೋಯಿತು, ಅವೆಲ್ಲಾ ನನಗಂತೂ ಓವರ್‌ಹೆಡ್ ಟ್ರಾನ್ಸ್‌ಮಿಶನ್ ಆಯ್ತು ಅನ್ನೋದು ಬೇರೆ ಹೇಳಬೇಕಿಲ್ಲ! ಸಂಪದದ ಹರಿಪ್ರಸಾದ್ ನಾಡಿಗರು ಹೇಳಿದ್ದು ಇದ್ದಿದ್ರಲ್ಲಿ ಸ್ವಲ್ಪ ಅರ್ಥವಾಯ್ತು. ಸರಳವಾಗಿ, ನೇರವಾಗಿ ಹೇಳಿದ್ರು. ಇನ್ನೊಂದ್ ಸ್ವಲ್ಪ ನಿಧಾನಕ್ಕೆ ಮಾತಾಡಬಹುದಿತ್ತು ಅನ್ನಿಸ್ತು. ಬರೀ ಭಾವಲಹರಿಗಳಲ್ಲದೇ ಬೇರೆ ಬೇರೆ ವಿಷಯಗಳ ಬಗ್ಗೆನೂ ಕನ್ನಡದಲ್ಲಿ ಬ್ಲಾಗಿಸೋ ಅವಶ್ಯಕತೆ, ಸಾಧ್ಯತೆಗಳ ಬಗ್ಗೆ ಕೆಂಡಸಂಪಿಗೆಯ ರಷೀದರು, ದಟ್ಸ್‌ಕನ್ನಡದ ಶ್ಯಾಮಸುಂದರ್‍ಅವರು ಹೇಳಿದ್ರು. ಈಚೆಗೆ ಹುಲುಸಾಗಿ ಬೆಳೀತಿರೋ ಬ್ಲಾಗ್‌ಗಳನ್ನ ಓದ್ತಾ ಈ ಮಾತು ನನ್ನ ಮನಸ್ಸಿಗೂ ಬಂದಿತ್ತು. ಅದಕ್ಕೇ ಹೀಗೇಸುಮ್ಮ್ನೆಇಲ್ಲಿ ಬರೆಯೋದರ ಜೊತೆಗೆ ಸಂಗೀತಕ್ಕಾಗಿ sree-raaga.blogspot.com ಷುರು ಮಾಡಿದ್ದೆ. ಆದ್ರೆ ಹಾಗಂತ ಭಾವಲಹರಿಗಳಿಗೆ ಬೆಲೆಯಿಲ್ಲ ಅಂತಲ್ಲ. ಕಂಪ್ಯೂಟರ್ ಜನಾಂಗಕ್ಕೆ ಕನ್ನಡ ಹತ್ತಿರವಾಗಿಸೋದ್ರಲ್ಲಿ, ನಾವೂ ಕನ್ನಡ ಓದ್ತೀವಿ-ಬರೀತೀವಿ ಅನ್ನೋ ಅಭಿಮಾನ ಹುಟ್ಟಿಸೋದ್ರಲ್ಲಿ ಭಾವಲಹರಿಗಳ ಪಾತ್ರ ಅದನ್ನ ದಾಟಬೇಕಾದ ಅವಶ್ಯಕತೆಯಷ್ಟೇ ದೊಡ್ದದು ಅನ್ನಿಸುತ್ತೆ.

ಇದೇ ವಿಷ್ಯಕ್ಕೆ ಸಂಬಂಧ ಪಟ್ಟಹಾಗೆ ಶ್ಯಾಮ್‌ಸುಂದರ್ ಅವ್ರು ಹೇಳಿದ್ದ್ ಇನ್ನೊಂದು ಮಾತು - ಬ್ಲಾಗರ್ಸ್ ಜವಾಬ್ದಾರಿಯ ಬಗ್ಗೆ. ನನಗೇನ್ ಬೇಕೋ ಬರೀತೀನಿ, ನಿಂಗೆ ಇಷ್ಟ ಇದ್ದ್ರೆ ಓದು, ಕಷ್ಟವಾದ್ರೆ ಬಿಡು ಅನ್ನೋ ಧೋರಣೆ ತಪ್ಪು ಅಂದ್ರು. ಅದು ಸರೀನೇ... ಆದ್ರೆ ಬ್ಲಾಗ್ ಷುರುಮಾಡಿದ್ ಹೊಸದ್ರಲ್ಲಿ ನನಗೂ ಆ ಧೋರಣೆ ಇದ್ದದ್ದು ಸುಳ್ಳಲ್ಲ. ಆ ಬಗ್ಗೆ ತಿಳಿಯದೇ ಕನ್ನಡಸಾಹಿತ್ಯ.ಕಾಂನ ಶೇಖರ್‌ಪೂರ್ಣ‌ಅವರ ಜೊತೆ ವಾದಕ್ಕೂ ಇಳಿದಿದ್ದೆ! ಈಗ ಭಾರೀ ಜವಾಬ್ದಾರಿಯುತವಾಗಿ ಬರೀತೀನಿ ಅಂತಲ್ಲ. ಆದ್ರೆ ಕಡೇಪಕ್ಷ ಹಾಗೆ ಬರೀತಿಲ್ಲ ಅನ್ನೋ ಅರಿವು, ಅದರ ಬಗ್ಗೆ ಸ್ವಲ್ಪ guilt, ಚೆನ್ನಾಗಿ, ಅರ್ಥಪೂರ್ಣವಾಗಿ ಏನಾದ್ರೂ ಬರೀಬೇಕನ್ನೋ ಹಂಬಲ ಇದೆ ಅನ್ನಬಹುದು. ಇಷ್ಟು ಅನ್ನಿಸೋಕೆ ತಲೆಯಮೇಲೆ ಯಾವ ಬೋಧಿವೃಕ್ಷವೂ ಬೆಳೀಲಿಲ್ಲ, ೨ ವರ್ಷ ಹೀಗೇಸುಮ್ಮ್ನೆ ಕುಟ್ಟಿ ಉಳಿದ ಬ್ಲಾಗಿಗರ ಜೊತೆ interact ಮಾಡ್ತಾ, ಅವರು ಬರೆದದ್ದು ಓದ್ತಾ ಬಂದ ಅನುಭವ ಸಾಕಾಯ್ತು. ಒಂದಷ್ಟು introspection ಮಾಡಿಕೊಂಡ ಎಲ್ಲ ಬ್ಲಾಗಿಗರೂ ಹೀಗೆ ಅನುಭವದ ಘಟ್ಟಗಳನ್ನ ಹಾದುಹೋಗ್ತಾರೆ, ಹೀಗೇ ಬರೀತಾ ಹೋದ ಹಾಗೆ introspection ನಮ್ಮೊಳಗಿಂದ್ಲೇ ಅವಶ್ಯಕತೆಯಾಗಿ ಬರುತ್ತೆ ಅನ್ನಿಸುತ್ತೆ. ಯಾರಾದ್ರೂ ಸ್ವಲ್ಪದೊಡ್ಡವರು-ಅನುಭವಿಗಳು ನಮ್ಮ ಬರಹಗಳನ್ನ ಓದಿ, ನಮ್ಮ ಭಂಡಧೈರ್ಯಗಳಿಗೆ ನಾಕು ಪ್ರಶ್ನೆಗಳನ್ನಿಟ್ಟರೆ ಈ introspection ಇನ್ನಷ್ಟು ಸುಲಭವಾಗುತ್ತೆ. ಜೊತೆಗೆ ಸ್ವಲ್ಪ guidence ಕೂಡ ಸಿಕ್ಕರೆ ಗಟ್ಟಿಯೂ ಆಗ್ತೀವೆನೋ, ಒಳ್ಳೇ ಬರಹಗಾರರಲ್ಲದಿದ್ರೂ ಒಳ್ಳೆಯ ಓದುಗರಾಗಿಯಾದ್ರೂ...

ಅದೇನೇ ಇದ್ದರೂ ಯಾವ ಪಬ್ಲಿಶರ್ ಹಂಗಿಲ್ಲದೇ ನಾಕುಜನ ಓದುಗರನ್ನ ಗಿಟ್ಟಿಸಿಕೊಳ್ಳೋದರಿಂದ ನಮ್ಮಲ್ಲಿ ಒಂದುರೀತಿಯಲ್ಲಿ natural bratತನ ಇದ್ದೇ ಇರುತ್ತೆ, ಅದರಿಂದ ಬ್ಲಾಗ್ ಬರಹಗಳಿಗೇ ಒಂದು ವಿಶಿಷ್ಟ ಫ್ಲೇವರ್ ಕೂಡ ಇರುತ್ತೆ. ಅದು ತೀರಾ ಬೇಜವಾಬ್ದಾರಿತನವಾಗದೇ ಹೋಗೋದಕ್ಕೆ ಸ್ವಲ್ಪ ಎಚ್ಚರವಹಿಸಬೇಕಷ್ಟೆ. ಸಂವಾದ, ಬೇರೆ ಬರಹಗಳ ಓದು ಇದಕ್ಕೆ ಸಹಾಯವಾಗುತ್ತೆ ಅಂತ ನನಗನ್ನಿಸೋದು... ನಮ್ಮ-ನಮ್ಮ ನಡುವಿನ ಮಾತುಗಳು ಬೆಳೀಬೇಕು ಅನ್ನೋದಕ್ಕೆ, ಇವತ್ತಿನ ಮೀಟ್‌ನಂಥದ್ದರ ಅವಶ್ಯಕತೆಗೆ ಇನ್ನೊಂದು ಕಾರಣ...

ಬ್ಲಾಗಿಂಗ್ ಅನುಭವದ ಬಗ್ಗೆ ಮಾತಾಡಿದವ್ರಿಗೆ ಇನ್ನೊಂದೆರಡು ನಿಮಿಷ ಪ್ರಿಪರೇಷನ್ ಸಮಯ ಸಿಕ್ಕಿದ್ರೆ ಸ್ವಲ್ಪ ಫೋಕಸ್ಡ್ ಆಗಿ ಮಾತಾಡೋಕೆ ಸಾಧ್ಯವಾಗ್ತಿತ್ತೇನೋ ಅನ್ನಿಸ್ತು. ’ಚೆನ್ನಾಗಿದೆ’ ಅನ್ನೋದರಿಂದ ಮುಂದೆ ಹೋಗಿ ವಿಮರ್ಶೆಯೂ ಬರಬೇಕು ಅನ್ನೋ ಸುಧನ್ವ ದೇರಾಜೆಯವರ ಮಾತು ನಮ್ಮ ನಮ್ಮಲ್ಲಿ ಇನ್ನಷ್ಟು ಮಾತು-ಕತೆಯ ಅವಶ್ಯಕತೆಯನ್ನ ತೋರಿಸ್ತು ಅನ್ನಿಸುತ್ತೆ. ಈ ರೀತಿಯ ಹೀಗೇ ಸುಮ್ಮನೆ ಚೆನ್ನಾಗಿದೆ ಅನ್ನೋ ಕಾಮೆಂಟುಗಳಿಗೂ ಅವುಗಳದ್ದೇ ಬೆಲೆ ಇದೆ, ಬರೆಯುವವರ ಹುಮ್ಮಸ್ಸಿಗೆ ನೀರೆರೆಯೋದರಲ್ಲಿ. ಆದರೆ ಪ್ರಕಟಿತ ಸಾಹಿತ್ಯಕ್ಕೆ ಸಿಗುವಷ್ಟು ವಿಮರ್ಶೆಯ ಮರ್ಯಾದೆ ಸಿಗದಿರೋದಕ್ಕೆ ಇದು ಬಹುಮಟ್ಟಿಗೆ ’ಹೀಗೆ ಸುಮ್ಮನೆ’ ಬರಿಯೋ-ಓದೋ ಮೀಡಿಯಮ್ ಆಗಿರೋದು ಕಾರಣವೇನೋ. ರೀಡಿಂಗ್ ಕ್ಲಬ್ ಆಗಿಯೋ ಮೈಲ್ ಗ್ರೂಪ್ ಆಗಿಯೋ ಬರೆದದ್ದನ್ನು ಚರ್ಚಿಸಲು ಒಂದು ಮಾಧ್ಯಮ ಹುಡುಕಿಕೊಳ್ಳಬೇಕಾದ ಅಗತ್ಯ ಇದೆ ಅನ್ನಿಸುತ್ತೆ, ಕಾಮೆಂಟ್‌ಗಳ ಮೂಲಕವೇ ಇದು ಸಾಧ್ಯವಾಗೋದು ಅಷ್ಟು ಸುಲಭವಲ್ಲವೇನೋ ಅನ್ನಿಸುತ್ತೆ. ಯಾಕಂದ್ರೆ ಬ್ಲಾಗ್ ಓದೋದು, ಕಾಮೆಂಟಿಸೋದು ಎಲ್ಲಾ ಕ್ಯಾಶುವಲ್ಲಾಗಿ, ಯಾವಾಗ್ಲೋ ಸಿಕ್ಕ ಎರಡು ನಿಮಿಷದ ಬ್ರೇಕ್‌ನಲ್ಲೂ ನಡೆದುಹೋಗ್ತಿರುತ್ತೆ. ಫೋಕಸ್ಡ್ ಪ್ರತಿಕ್ರಿಯೆ-ಚರ್ಚೆಗಳಿಗೆ ಅದಕ್ಕೇ ಆದ ಒಂದು ಸ್ಥಾನ ಕಲ್ಪಿಸದೇ ಇದು ಸಾಧ್ಯವಾಗಲ್ಲ. ಕನ್ನಡ ಬ್ಲಾಗ್‌ಗಳ ಸಂಖ್ಯೆಯ ಜೊತೆ ವ್ಯಾಪ್ತಿಯೂ ಬೆಳೀತಿರೋ ಕಾಲದಲ್ಲಿ ಅವುಗಳನ್ನ ಪೋಷಿಸೋದಕ್ಕೆ ಈ ರೀತಿಯ ಸಪೋರ್ಟ್ ಸಿಸ್ಟಂ ಹುಟ್ಟೋ ಅವಶ್ಯಕತೆ ಇದೆ ಅನ್ನಿಸುತ್ತೆ. ಇವತ್ತಿನ ಮೀಟ್ ಈ ಬಗೆಯ ಸಂವಾದಗಳಿಗೆ ಒಂದು ಒಳ್ಳೆಯ ಪ್ರಾರಂಭ ಅನ್ನಿಸುತ್ತೆ.

ಚಹಾ ವಿರಾಮದಲ್ಲಿ ಜಯಾ ಹೇಳಿದಂತೆ ಸ್ವಲ್ಪ preachy ಅನ್ನಿಸಿದ್ರೂ ಚಿಂತನೆಗೆ ಹಚ್ಚೋ ಹಲವು ವಿಷ್ಯಗಳು ಕಾರ್ಯಕ್ರಮದಲ್ಲಿದ್ದ್ವು ಅನ್ನೋದು ನಿಜ. ಮೊದಲ ಪ್ರಯತ್ನವಾಗಿ ಕಾರ್ಯಕ್ರಮ ತುಂಬಾ ಯಶಸ್ವಿ ಅನ್ನಿಸ್ತು. ನಮ್ಮ ನಡುವೆ ಇನ್ನೊಂದಿಷ್ಟು interactionಗೆ ಅವಕಾಶ, ಕಂಟೆಂಟ್ ಬಗ್ಗೆ ಇನ್ನೊಂದಿಷ್ಟು ಗಮನ ಇದ್ದಿದ್ದರೆ... ಇರುತ್ತೆ, ಮುಂದಿನ ಪ್ರಯತ್ನದಲ್ಲಿ, ಅನ್ನಿಸುತ್ತೆ.

ಒಟ್ಟ್ನಲ್ಲಿ ಹಲವು ದಿನಗಳಿಂದ ಒಬ್ಬರದೊಬ್ಬರು ಬ್ಲಾಗ್ ಓದ್ತಾ, ಕಮೆಂಟಿಸ್ತಾ ಇದ್ದ ಹಲವು ಗೆಳೆಯರನ್ನ ಮೊದಲಬಾರಿ ಮುಖತಃ ಭೇಟಿ ಮಾಡಿದ್ದು ತುಂಬಾ ಖುಷಿಯಾಯ್ತು! ಶ್ರೀ, ಸುರೇಖಾ(ಮನಸ್ವಿನಿ), ಸಿಂಧು, ಶ್ರೀನಿಧಿ, ಸುಶ್ರುತ, ರಾಧಾಕೃಷ್ಣ, ಅರವಿಂದ್ ನಾವಡ, ಶಿವಕುಮಾರ್, ಗುರುರಾಜ್... ಅಲ್ಲದೇ ಓದಿ ಚೆನ್ನಾಗಿ ಬರೀತಾರೆ ಅನ್ನಿಸಿದ್ದ ಹಲವು ಬ್ಲಾಗಿಗರನ್ನ ನೋಡಿದ್ದು, ಮಾತಾಡಿಸಿದ್ದು, ಹೊಸ ಪರಿಚಯಗಳಾಗಿದ್ದು... I guess everyone shares the feeling of wanting to take this forward. ಪ್ರಣತಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಲ್ದು! ಮಾತಾಡೋಕೆ ಟೈಮ್ ಸಾಲಲಿಲ್ಲ, ಮುಂದಿನ ಭೇಟಿ ಬೇಗ ಆಗ್ಬೇಕು! ಈ ಸಲ ಬರದೇ ಮಿಸ್ಆದ್ ಬ್ಲಾಗಿಗರನ್ನೂ ಮುಂದಿನಸಲ ಮೀಟ್ ಮಾಡೋ ಹಾಗಾಗಬೇಕು!

ಅಂದಹಾಗೆ ಯಾವ ಮದುವೆಮನೆ ಹುಡುಗೀರ್‍‌ಗೂ ಹೆಚ್ಚಾಗಿ ಸಂಭ್ರಮ-ಸಡಗರಗಳಿಂದ ಓಡಾಡ್ತಿದ್ದ ನಮ್ಮ ಶ್ರೀನಿಧಿ-ಸುಶ್ರುತ ಹುಡುಗರ್ ಗುಂಪನ್ನ ನೋಡಿ ಭಾಳಾ ಖುಷಿಯಾಯ್ತು!

ತುಂಬಾ ಕೊರೆದುಬಿಟ್ಟೆ! ಏನ್ ಮಾಡೋದು, ಅಷ್ಟು ಜನ ಕುಟ್ಟಿಗರನ್ನ ಒಟ್ಟಿಗೇ ನೋಡಿದ್ದ್ ಎಫೆಕ್ಟು!:P ಸರಿ ಇನ್ನು ಮಿಕ್ಕ ವಿವರಗಳಿಗೆ ಬೇರೆ ಬ್ಲಾಗ್‌ಗಳನ್ನ ನೋಡಿ:) ಮತ್ತೆ ನನ್ನ ಕ್ಯಾಮರಾ ಚಾರ್ಜ್ ಮಾಡೊದ್ ಮರೆತಿದ್ರಿಂದ ಫೋಟೋಗಳಿಗೆ ಕಾಯಬೇಕು...ನೀವ್ ಯಾರಾದ್ರೂ ಕ್ಲಿಕ್ಕಿಸಿದ್ರೆ ಪ್ಲೀಸ್ ಕಳ್ಸಿ!:)